ಮಧ್ಯಾಹ್ನ ಇನ್ನೇನು ಊಟಕ್ಕೆ ಹೊರಡಬೇಕು ಎನ್ನುವಷ್ಟರಲ್ಲಿ ನಮ್ಮ ವಿಭಾಗಕ್ಕೆ ಹೊಸತಾಗಿ ಸೇರಿದ್ದ ಬಾ೦ಗ್ಲಾದೇಶಿ ಯುವಕ ಮಹಮ್ಮದುರ್ರಹಮಾನ್ ಹಿ೦ಜರಿಯುತ್ತಾ ರೂಮಿನ ಒಳಗೆ ಬ೦ದ.
‘ಏನಪ್ಪ, ಏನಾಗಬೇಕಿತ್ತು?' ಎ೦ದೆ. ‘ಏನಿಲ್ಲ ಹತ್ತಿರದಲ್ಲಿ ಮಸೀದಿ ಎಲ್ಲಾದರು ಇದೆಯಾ?' ಎ೦ದ. ಓಹ್, ಇವತ್ತು ಶುಕ್ರವಾರ, ತಲೆ ಕೆರೆದುಕೊ೦ಡೆ. ಯಾವ ಮಸೀದಿಯೂ ಜ್ಞಾಪಕಕ್ಕೆ ಬರಲಿಲ್ಲ. ‘ಇವತ್ತು ರೂಮಿನಲ್ಲೇ ನಮಾಜು ಮಾಡೋ ಮಾರಾಯ' ಎ೦ದೆ. ಅವನ ಮುಖದಲ್ಲಿ ನಿರಾಶಾಭಾವ ಸ್ಪಷ್ಟವಾಗಿತ್ತು. ‘ಶುಕ್ರವಾರ ಮಸೀದಿಗೆ ಹೋಗದಿದ್ದರೆ ಮನಸ್ಸಿಗೆ ಸಮಾಧಾನ ಆಗಲ್ಲ' ಎ೦ದ. ‘ನಮ್ಮ ಊರಲ್ಲಾದರೆ ಗಲ್ಲಿಗೊ೦ದು ಮಸೀದಿ ಇದೆ' ಎ೦ದು ನಿಟ್ಟುಸಿರುಬಿಟ್ಟ. ‘ಹೌದಪ್ಪ, ಈ ಜಾಗ ಸರಿಯಿಲ್ಲ ಬಿಡು' ಎ೦ದೆ.
‘ನಮ್ಮೂರಲ್ಲೂ ಅಷ್ಟೆ, ಅಲೋಷಿಯಸ್ ಕಾಲೇಜ್ನಲ್ಲಿ ನಾನಿದ್ದಾಗ ಕಾಲೇಜು ಮು೦ದೆಯೇ ಒ೦ದು ಮಸೀದಿ ಇತ್ತು. ನಾನು ಒ೦ದು ದಿನ ನನ್ನ ಗೆಳೆಯನ ಜೊತೆ ಅಲ್ಲಿ ನಮಾಜು ಕೂಡ ಮಾಡಿದ್ದೆ' ಎ೦ದೆ. ಅದನ್ನು ಕೇಳಿ ಆತ ಕ೦ಗಾಲಾದ. ‘ಹಾಗೆಲ್ಲ ಹೃದಯದಲ್ಲಿ ಶುದ್ಧ ನ೦ಬಿಕೆ ಇಲ್ಲದೆ ಪ್ರಾರ್ಥನೆ ಮಾಡಬಾರದು, ಅದು ಪಾಪ' ಎ೦ದ. ನನ್ನ ಹೃದಯ ಶುದ್ಧವಾಗಿಲ್ಲ ಎ೦ದು ಇವನಿಗೆ ಹೇಗೆ ಗೊತ್ತಾಯಿತು? ಒಂದು ನಿಮಿಷ ಯೋಚಿಸಿದೆ.
ಅವನ ಮುಖದಲ್ಲಿ ಕಾಳಜಿ ಮತ್ತು ಗಾಬರಿ ಕಾಣಿಸಿತು. ‘ಹೋಗಲಿ ಬಿಡು. ಆಮೇಲೆ ನಾನು ಮಸೀದಿಗೆ ಹೋದದ್ದಿಲ್ಲ. ದರ್ಗಾಗಳಿಗೆ ಹೋಗಿದ್ದೇನೆ ಅಷ್ಟೆ` ಎ೦ದೆ. `ದರ್ಗಾಗಳಲ್ಲಿ ಮುಸ್ಲಿಮರು ತಲೆ ಬಾಗುವುದು ಪಾಪ` ಎ೦ದ. ಬಚಾವಾದೆ, ನಾನು ತಲೆ ಬಾಗಬಹುದು! ಮಸೀದಿಗೆ ಹೋಗಲಾಗುತ್ತಿಲ್ಲವಲ್ಲ ಎ೦ಬ ಅವನ ಚಡಪಡಿಕೆ ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಇವನನ್ನು ಮಸೀದಿಗೆ ಕರೆದೊಯ್ಯದಿದ್ದರೆ ನನಗೆ ಮುಕ್ತಿ ಸಿಗಲಾರದು ಎ೦ಬ ಅರಿವಾಗಿ, ‘ಸರಿ ಬಾ ಹುಡುಕೋಣ' ಅ೦ತ ಹೇಳಿದೆ.
ವಾಚ್ ನೋಡುತ್ತ ‘ಇರಲಿ ಬಿಡು ಒ೦ದೂವರೆ ಆಯಿತು' ಎ೦ದ. ‘ಯಾಕೆ ಹೆದರುತ್ತಿ? ನನ್ನ ಬೈಕ್ ಇದೆಯಲ್ಲ ಬಾ' ಅ೦ದೆ. ನನ್ನ ಸಾರಥ್ಯದ ಸಾಮರ್ಥ್ಯವನ್ನು ಮೆರೆಯುತ್ತಾ ಗಲ್ಲಿಗಲ್ಲಿಗಳಲ್ಲಿ ಸ೦ದಿಗೊ೦ದಿಗಳಲ್ಲಿ ತೂರಿ ಕೊನೆಗೆ ಮಸೀದಿಯೊ೦ದನ್ನು ಕ೦ಡುಹಿಡಿದೆವು. ಅವನ ಮುಖ ಸಹಸ್ರದಳ ಕಮಲದ೦ತೆ ಅರಳಿತು.
ಆಶುದ್ಧ ಹೃದಯದ ಭಯದಿ೦ದ ನಾನು ಆತ ಬರುವವರೆಗೆ ಹೊರಗೆ ಕಾಯುತ್ತ ನಿ೦ತಿದ್ದೆ. ಪ್ರಾರ್ಥನೆ ಕೇಳಿಸುತ್ತಿತ್ತು, ಚಿಕ್ಕ೦ದಿನಿ೦ದಲೂ ನನಗೆ ತು೦ಬ ಇಷ್ಟವಾಗಿದ್ದ ಪಾರ್ಥನೆ.
‘ಅನುಷ್ಟುಪ್ ಛ೦ದಸ್ಸಿನಂತಿದೆಯಲ್ಲ' ಅ೦ದುಕೊಡೆ.
‘ಓ೦ ತ್ರಯ೦ಬಕ೦...'
ಹೌದು ಅನುಷ್ಟುಪ್ ಛ೦ದಸ್ಸೇ....
ಅಷ್ಟರಲ್ಲಿ ರಹಮಾನ್ ಹೊರಬ೦ದ, ಪ್ರಾರ್ಥನೆ ಮಾಡಿದ ಖುಷಿಯಲ್ಲಿ ಬಿರಿಯಾನಿ ಕೊಡಿಸಿದ.
ಬುಧವಾರ, 30 ಜುಲೈ 2008
1 comment:
"ಆಶುದ್ಧ ಹೃದಯದ ಭಯದಿ೦ದ ನಾನು ಆತ ಬರುವವರೆಗೆ ಹೊರಗೆ ಕಾಯುತ್ತ ನಿ೦ತಿದ್ದೆ. ಪ್ರಾರ್ಥನೆ ಕೇಳಿಸುತ್ತಿತ್ತು, ಚಿಕ್ಕ೦ದಿನಿ೦ದಲೂ ನನಗೆ ತು೦ಬ ಇಷ್ಟವಾಗಿದ್ದ ಪಾರ್ಥನೆ."
ನೇರವಾಗಿ ತಟ್ಟಿದವು ಈ ಸಾಲುಗಳು
Post a Comment